Posts

ಪರಸ್ಪರ ಪ್ರೇಮಿಸುತ್ತಿರುವ ಹುಡುಗಿ ಮತ್ತು ಹುಡುಗ ಈಗಲೇ ಮದುವೆ ಆಗುವ ಹಾಗಿಲ್ಲ ; ಯಾಕಂದರೆ ಹುಡುಗ ನಿರುದ್ಯೋಗಿ . ಕೆಲಸಕ್ಕಾಗಿ ಅಲೆಯುತ್ತಿದ್ದಾನೆ . ಅವನಿಗೆ ಕೆಲಸ ಸಿಗೋದು ಯಾವಾಗ ? ತಾವು ಮದುವೆ ಆಗೋದು ಯಾವಾಗ ? ಎಂಬರ್ಥದ ಹಾಡು ’ಮೂರು ಮಹಾನ್ ಸಮಸ್ಯೆಗಳ ಚಿತ್ರಣ’ ಎಂಬ ಜಾಹೀರಾತಿನೊಂದಿಗೆ ಬಂದಿದ್ದ ’ರೋಟಿ ಕಪಡಾ ಔರ್ ಮಕಾನ್’ ಚಿತ್ರದಲ್ಲಿದೆ. ಈ ಹಾಡನ್ನು ಝೀ ಮ್ಯೂಸಿಕ್ ಚಾನೆಲ್ಲಿನಲ್ಲಿ ನೋಡಬಹುದು . ಇಬ್ಬರೂ ಶ್ರಾವಣದ ಮಳೆಯಲ್ಲಿ ನೆನೀತಾ ಇರೋವಾಗ ಅವಳು ಹಾಡುವ ಹಾಡು ಇದು .( ಹಾಯ್ ಹಾಯ್ ಏ ಮಜಬೂರಿ ) ಸಾಕಪ್ಪಾ ಸಾಕು ಈ ಋತುಮಾನ, ಮತ್ತೆ ಈ ದೂರ ನನ್ನನ್ನು ಪ್ರತಿಕ್ಷಣ ಗೋಳಾಡಿಸುತ್ತಿವೆ ನಿನ್ನ ನಾಕು ಕಾಸಿನ ನೌಕರಿ ದಾರಿ ಕಾಯ್ದು ನನ್ನ ಲಕ್ಷಾಂತರದ ಶ್ರಾವಣ ವ್ಯರ್ಥವಾಗುತಿದೆ ಎಷ್ಟು ಶ್ರಾವಣ ಕಳೆದವು , ಆಸೆಯಿಟ್ಟುಕೊಂಡು ಕಾದಿರುವೆ , ನಲ್ಲನು ಒದಗುವ ಶ್ರಾವಣ ಬಂದೀತಾದರೂ ಎಂದು ? ಪ್ರೇಮಬಂಧನ ಎಂಥಾದ್ದು ಅಂದರೆ ಸಿಲುಕಿದರೊಮ್ಮೆ ಬಿಡುಗಡೆಯೇ ಇಲ್ಲ ಎಂದಿಗೂ ; ನಿನ್ನ ನೌಕರಿಯ ಖಾತರಿ ಆದರೂ ಏನು ಇವತ್ತು ಸಿಗಬಹುದು ನಾಳೆ ಕೈತಪ್ಪಬಹುದು !
ಸಾರ್ತ್ರ್‍ ನ ’ಪದಚರಿತ’ - ಓದಿನ ಗೀಳು , ಬರಹದ ಗೋಳು . --------------------------------------------------- ( ಇಲ್ಲಿ ಬರೆದದ್ದೆಲ್ಲವೂ ನಾನು ಬರೆದಿದ್ದಲ್ಲ ; ನಾನು ಆಯ್ದ ವಾಕ್ಯಗಳು ಬಹಳ - ಶ್ರೀಕಾಂತ ಮಿಶ್ರೀಕೋಟಿ) ಪ್ರಸಿದ್ಧ ತತ್ವಶಾಸ್ತ್ರಜ್ಞ , ಚಿಂತಕ, ಕಾದಂಬರಿಕಾರನ ಪ್ರಸಿದ್ಧ ಕೃತಿ ’ಲೆಮೊ’ ದ ಅನುವಾದವೇ ’ಪದಚರಿತ’ . ಇದು ಅವನ ಬಾಲ್ಯದ ’ಆತ್ಮಚರಿತ್ರೆ’ ; ಅವನನ್ನು ಕಾಡಿದ ಬರೆದಿಟ್ಟ ಶಬ್ದಗಳ ಜತೆ ನಡೆಸಿದ ಒಂದು ಸುದೀರ್ಘ ಪ್ರಣಯ ಪ್ರಸಂಗ. ಈ ಪುಸ್ತಕ ಜೀವನಾನುಭವದ ಸಂದರ್ಭದಲ್ಲಿ ಪುಸ್ತಕಗಳ ಮತ್ತು ಭಾಷೆಯ ಉಪಯುಕ್ತತೆ ಮತ್ತು ಉಪಯೋಗದ ಬಗ್ಗೆ ನಡೆಸಿರುವ ವಿಶಿಷ್ಟ ಸಂಶೋಧನೆ ಮತ್ತು ಮೌಲ್ಯಮಾಪನ. ಇದನ್ನು ಅನುವಾದ ಮಾಡಿದವರು ರಾಜಕಾರಣಿ ಕೆ. ಎಚ್. ಶ್ರೀನಿವಾಸರು . ಸುಮಾರು ಮೂರ್ನಾಲ್ಕು ವರ್ಷ ತಮ್ಮ ರಾಜಕಾರಣದ ನಡುವೆ ಶ್ರಮಿಸಿದ್ದಾರೆ . ಪುಸ್ತಕವನ್ನು ಮೂಲದಲ್ಲಿ ಅರ್ಥ ಮಾಡಿಕೊಳ್ಳುವದೇ ಕಷ್ಟ ; ಪುಸ್ತಕ ಅಂತಹದು ; ಅಂಥದ್ದನ್ನು ಕನ್ನಡಕ್ಕೆ ಬಹಳ ಶ್ರಮಪಟ್ಟು ತಂದಿದ್ದಾರೆ . ಸಾರ್ತ್ರ್‍ ತನ್ನ ಐವತೊಂಭತ್ತನೇ ವಯಸ್ಸಿನಲ್ಲಿ ಪುನರ್ ಗ್ರಹಿಸಿದ ಬಾಲ್ಯದ ಕತೆ ಇದು . ಅವನು ಚಿಕ್ಕಂದಿನಲ್ಲಿದ್ದಾಗ ಅವನಿಗೆ ಜಾಣತನ , ಲೇಖಕತನ , ಒಳ್ಳೆಯತನವನ್ನು ಹೊರಿಸಲಾಯಿತು . ಅದರ ವಿವರಗಳು , ಓದು , ಬರಹದ ಗೀಳು , ಗೋಳು ಇಲ್ಲಿದೆ . ಇಲ್ಲಿನ ವಾಕ್ಯಗಳನ್ನು ಅವಸರದಲ್ಲಿ ಓದಿ ತಿಳಿಯಲಾಗುವದಿಲ್ಲ . ಇಲ್ಲಿನ ವಾಕ್ಯಗಳ ರೀತಿಯೇ ಅದ...
ಕನ್ಫ್ಯೂಷಿಯಸ್ - ೧ -- ಇತರರು ನನ್ನನ್ನು ತಿಳಿಯಲಿಲ್ಲ ಎಂದು ನಾನು ದುಃಖಿಸುವದಿಲ್ಲ . ನಾನು ಇತರರನ್ನು ತಿಳಿದುಕೊಳ್ಳಲಿಲ್ಲ ಎಂಬುದು ನನ್ನ ದುಃಖ. -- ಸಾಹಿತ್ಯದ ಅಭ್ಯಾಸದಲ್ಲಿ ನಾನು ಯಾರ ಸಮಕ್ಕಾದರೂ ಬಂದೇನು. ಆದರೆ ಉತ್ತಮಪುರುಷನು ಬದುಕುತ್ತಿರುವಂತೆ ಬದುಕುತ್ತಿರುವೆನೇ ಎಂದರೆ ನನಗೆ ಅದು ಸಾಧ್ಯವಾಗಿಲ್ಲವೆಂದೇ ತೋರುತ್ತದೆ. -- ನನ್ನ ನಡತೆಯನ್ನು ಎಲ್ಲಿ ಉತ್ತಮಗೊಳಿಸುವದಕ್ಕೆ ಮರೆತೇನೋ , ನನ್ನ ವ್ಯಾಸಂಗದಲ್ಲಿ ಎಲ್ಲಿ ನಾನು ಪ್ರಮತ್ತನಾದೇನೋ, ಸರಿಯಾದ ದಾರಿ ಕಂಡಾಗ ಎಲ್ಲಿ ನಾನು ಮುಂದುವರೆಯದೆ ನಿಂತೇನೋ, ಮಾಡಿದ ತಪ್ಪು ಗೋಚರವಾದಾಗ ಎಲ್ಲಿ ತಿದ್ದಿಕೊಳ್ಳದೆ ಹೋದೇನೋ ಎಂಬುದೇ ನನ್ನ ಮನಸ್ಸನ್ನು ಸದಾ ಕೊರೆಯುವ ಚಿಂತೆ. --ಮೂರು ಜನ ಒಟ್ಟಿಗೆ ಹೋಗುತ್ತಿದ್ದರೆ , ನಾನು ಎಲ್ಲಿ ಇಬ್ಬರು ಗುರುಗಳನ್ನು ಪಡೆಯಬಲ್ಲೆ.ಒಳ್ಳೆಯವನನ್ನು ಆರಿಸಿಕೊಂಡು ಅವನ ಉದಾಹರಣೆಯನ್ನು ಅನುಸರಿಸಲೆತ್ನಿಸುತ್ತೇನೆ. ಕೆಟ್ಟವನನ್ನು ಆರಿಸಿಕೊಂಡು ಆ ತಪ್ಪು ನನ್ನಲ್ಲಿ ಇಲ್ಲದಂತೆ ಮಾಡಲು ಯತ್ನಿಸುತ್ತೇನೆ. -- ಸತ್ಯವಂತನಿಗೆ ಚಿಂತೆಯಿಲ್ಲ . ಧೈರ್ಯಶಾಲಿಗೆ ಭಯವಿಲ್ಲ . ಜ್ಞಾನಿಗೆ ಸಂಶಯವಿಲ್ಲ. -- ನಾನು ತುಂಬ ಕಲಿತು ಎಲ್ಲವನ್ನು ನೆನಪಿನಲ್ಲಿದಲು ಪ್ರಯತ್ನಿಸಿದೆ ಎಂದು ತಿಳಿದಿದ್ದೀಯಾ ? ಇಲ್ಲ . ಆ ಎಲ್ಲವನ್ನು ಪೋಣಿಸಿ ಒಂದು ದಾರದಂತೆ ಹಿಡಿದಿಡುವ ಒಂದು ಕ್ರಮವಿದೆ , ದಾರಿಯಿದೆ. -- ಕಷ್ಟ ಉತ್ತಮನಿಗೆ ಬರಬಹುದು. ಆದರೆ ಹೀನನಾದವನು ಆ ಕಾರಣವಾಗಿ ನಡತೆಕೆಡುತ್ತ...
ತತ್ವಜ್ಞಾನಿ ಮತ್ತು ಒಣರೊಟ್ಟಿ ತತ್ವಜ್ಞಾನಿಯೊಬ್ಬ ಒಣರೊಟ್ಟಿ ತಿನ್ನುತ್ತಾ ಕೂತಿದ್ದ . ಆಗ ಅವನ ಬಳಿ ಒಬ್ಬ ರಾಜಕುಲದವನು ಹಾದುಹೋದ. ತತ್ವಜ್ಞಾನಿ ಅವನಿಗೆ ಹೆಚ್ಚು ಗಮನಕೊಡದೆ , ಗೌರವ ಸೂಚಿಸದೆ ತನ್ನಷ್ಟಕ್ಕೆ ತಾನಿದ್ದ . ಅವನ ಸ್ನೇಹಿತ ಹಾಗೆ ಮಾಡದೆ ಆ ಪ್ರಮುಖವ್ಯಕ್ತಿಯನ್ನು ವಂದಿಸಿದ. ತತ್ವಜ್ಞಾನಿಗೆ ಸ್ನೇಹಿತ ಹೇಳಿದ . ' ನೀನು ಅವರಿಗೆ ಸ್ವಲ್ಪ ಗೌರವ ಸೂಚಿಸಿದ್ದರೆ , ನಿನಗೆ ಒಣರೊಟ್ಟಿ ತಿಂದು ನೀರು ಕುಡಿದು ಇರುವ ದುರ್ಗತಿ ಬರುತ್ತಿದ್ದಿಲ್ಲ' . ಆಗ ತತ್ವಜ್ಞಾನಿ ಹೇಳಿದ. -' ಒಣರೊಟ್ಟಿ ತಿಂದು ನೀರು ಕುಡಿದು ಇರುವದು ಹೇಗೆಂದು ನಿನಗೆ ಗೊತ್ತಿದ್ದರೆ ನಿನಗೆ ಈ ದುರ್ಗತಿ ಬರುತ್ತಿದ್ದಿಲ್ಲ' .
ಕಥೆಗಳ ಕುರಿತು ಕಥೆಯಾಗಿಸಿಕೊಳ್ಳದೆ ನಾವು ಏನನ್ನೂ ಗ್ರಹಿಸಲಾರೆವು, ಅರ್ಥ ಮಾಡಿಕೊಳ್ಳಲಾರೆವು. ಬದುಕು ಎಷ್ಟು ವಿಶಾಲ, ಅಸಂಗತ, ಅತಾರ್ಕಿಕ ಎಂದರೆ ಅದಕ್ಕೆ ಅರ್ಥ, ತರ್ಕ, ಸುಸಂಗತತೆ ನೀಡುವ ಸಲುವಾಗಿಯೇ ಮನುಷ್ಯ ಕಥೆಯ ಕಲೆಯನ್ನು ಕಟ್ಟಿಕೊಂಡಿದ್ದಾನೆ --olnswamy
ಕೆಲ ಹಾಯ್ಕುಗಳು olnswamy ಅವರು ಅನುವಾದಿಸಿರುವ ಕೆಲ ಹಾಯ್ಕುಗಳು: ಹಾಯ್ಕು ಜಪಾನಿನ ಸಾಹಿತ್ಯದ ಒಂದು ವಿಶಿಷ್ಟ ಕವಿತಾ ರೂಪ. ಈ ಜಗತ್ತಿನಲ್ಲಿ ನಾವು ಹೂಗಳನ್ನು ದಿಟ್ಟಿಸುತ್ತಾ ನಡೆಯುತ್ತೇವೆ ನರಕದ ಚಾವಣಿಯ ಮೇಲೆ ಹಗಲೂ ಇರುಳೂ ಬುದ್ಧನನ್ನು ನೆನೆಯುತ್ತಾ ಸೊಳ್ಳೆಗಳನ್ನು ಕೊಲ್ಲುತ್ತಾ ಬದುಕಿದ್ದೇನೆ. ಮಧ್ಯಾಹ್ನ ಮಲಗಿಕೊಂಡು ರಸ್ತೆ ರಿಪೇರಿಯವರ ಗದ್ದಲ ಕೇಳಿಸಿಕೊಳ್ಳುತ್ತಾ ನಾಚಿಕೊಳ್ಳುತ್ತಾ ಇದ್ದೇನೆ. ಹೊಸ ವರುಷದ ದಿನ ಎಲ್ಲವೂ ಅರಳಿವೆ ನಾನು ಮಾತ್ರ ಸಾಮಾನ್ಯವಾಗಿಯೇ ಇರುವೆ. ಈ ನಮ್ಮ ಲೋಕದಲ್ಲಿ ತಿನ್ನುವುದು ಅಮೇಧ್ಯವಾಗಲೆಂದು ಮಲಗುವುದು ಎಚ್ಚರವಾಗಲೆಂದು ಎಲ್ಲದರ ಕೊನೆಗೆ ಸುಮ್ಮನೆ ಬರುವುದು ಸಾವು ನಿಶ್ಚಲವೆಂದರೆ ಇದೇ ಬಿರು ಬಿಸಿಲಲ್ಲಿ ಬಂಡೆಗೆ ಅಪ್ಪಳಿಸುವ ಮರಕುಟಿಗನ ಸದ್ದು
ಕನ್ನಡದ ದೀಪ ಶಕ್ತಿಮೂಲವು ನಿನಗೆ ಕನ್ನಡದ ಪ್ರೇಮ ಕನ್ನಡಿಗ ನೀನಾಗು ಕನ್ನಡದ ಭೀಮ ನೀನಾಗು ಕನ್ನಡದ ತೇಜ ಸ್ವರೂಪ ಕನ್ನಡಿಗರೆದೆ ಬೆಳಗೆ ಕನ್ನಡವೇ ದೀಪ ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ ಹರ್ಷ ಉಕ್ಕಿಸುವಂತೆ ಶೋಭಾಯಮಾನ ಕನ್ನಡದ ಮನೆಯಾಗೆ ಜ್ಯೋತಿರ್ನಿಧಾನ ಕನ್ನಡದ ಮಾನ , ಕನ್ನಡದ ಪ್ರಾಣ ಉರಿವವರು ಬೇಕಿನ್ನು ಇದರೆಣ್ಣೆಯಾಗಿ ಸುಡುವವರು ಬೇಕಿನ್ನು ನಿಡುಬತ್ತಿಯಾಗಿ ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ ಚಿರಕಾಲ ಬೆಳಗಲಿ ಕನ್ನಡದ ದೀಪ ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ ಭಾರತಕೆ ಬಲವಾಗಿ ಭವ್ಯ ಪ್ರದೀಪ ಕಳೆಯುತ್ತ ತಾಪ , ಬೆಳೆಸುತ್ತ ಸೈಪ ---- ರಚನೆಕಾರರು - ಸಿದ್ಧಲಿಂಗಯ್ಯ ಈ ಹಾಡನ್ನು ಕನ್ನಡದ ನಟಸಾರ್ವಭೌಮ ರಾಜಕುಮಾರ್ ಅವರ ಜೇನಿನಂತಹ ದನಿಯಲ್ಲಿ ' ಕನ್ನಡವೇ ಸತ್ಯ ' ಕ್ಯಾಸೆಟ್ಟಿನಲ್ಲಿ(ಧ್ವನಿಸುರಳಿಯಲ್ಲಿ ) ಕೇಳಿ ಆನಂದಿಸಿ .
ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು.ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.ಸಂನ್ಯಾಸಿ ಮೀನು ತಿನ್ನುವಂತಿರಲಿಲ್ಲ. ಆದರೆ ಅಮ್ಮನಿಗೆ ಮೀನು ಎಂದರೆ ಆಸೆ. ಶೌನ್ ತಾಯಿಗೆಂದು ಮೀನು ತರುತ್ತಿದ್ದ. ಅದನ್ನು ಕಂಡು ಜನ ಹಾಸ್ಯಮಾಡುತ್ತಿದ್ದರು. ಶೌನ್ ಅದನ್ನು ಲೆಕ್ಕಕ್ಕೇ ಇಡುತ್ತಿರಲಿಲ್ಲ.ತನ್ನ ಮಗನನ್ನು ಜನ ಲೇವಡಿ ಮಾಡುವುದು ಕಂಡು ತಾಯಿಗೆ ಬೇಸರವಾಯಿತು. “ನಾನೂ ಸಂನ್ಯಾಸಿನಿ ಆಗುತ್ತೇನೆ. ಸಸ್ಯಾಹಾರವನ್ನೇ ತೆಗೆದುಕೊಳ್ಳುತ್ತೇನೆ” ಎಂದಳು. ಸರಿ. ತಾಯಿ ಮಗ ಇಬ್ಬರೂ ಒಟ್ಟಿಗೇ ಅಧ್ಯಯನ ಮಾಡತೊಡಗಿದರು.ಶೌನ್‌ಗೆ ಸಂಗೀತವೆಂದರೆ ಪ್ರಾಣ. ಬಹಳ ಚೆನ್ನಾಗಿ ವಾದ್ಯಗಳನ್ನು ನುಡಿಸುತ್ತಿದ್ದ. ಕೆಲವೊಮ್ಮೆ ಅವನ ತಾಯಿ ಕೂಡ ದನಿಗೂಡಿಸುತ್ತಿದ್ದಳು. ಹುಣ್ಣಿಮೆಯ ರಾತ್ರಿಗಳಂದು ಇಬ್ಬರೂ ಹಾಡುತ್ತಾ, ವಾದ್ಯ ನುಡಿಸುತ್ತಾ ಇದ್ದರು.ಅಂಥ ಒಂದು ರಾತ್ರಿ ಅವ...
ಝೆನ್ ಗುರುವಿನ ಕೆಲವು ನಿಯಮಗಳು ಅಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು:ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.ಯಾರಾದರೂ ಅತಿಥಿ ಬಂದರೆ ನೀನೊಬ್ಬನೇ ಇರುವಾಗ ಯಾವ ಧೋರಣೆ ಇರುತ್ತದೆಯೋ ಅದೇ ಧೋರಣೆಯಲ್ಲಿ ಸ್ವಾಗತಿಸು. ಒಬ್ಬನೇ ಇರುವಾಗ ಅತಿಥಿ ಇದ್ದರೆ ಹೇಗೆ ಇರುತ್ತೀಯೋ ಹಾಗೆಯೇ ಇರು.ಆಡುವ ಮಾತಿನ ಮೇಲೆ ನಿಗಾ ಇರಲಿ. ಏನು ಆಡುತ್ತೀಯೋ ಹಾಗೆಯೇ ನಡೆದುಕೋ.ಅವಕಾಶ ಸಿಕ್ಕಿದಾಗ ಅದನ್ನು ಕಳೆದುಕೊಳ್ಳಬೇಡ. ಆದರೆ ಏನೇ ಮಾಡುವ ಮೊದಲು ಎರಡು ಬಾರಿ ಆಲೋಚಿಸು.ಆಗಿ ಹೋದದ್ದರ ಬಗ್ಗೆ ಚಿಂತಿಸಬೇಡ. ಭವಿಷ್ಯವನ್ನು ನೋಡು.ನಾಯಕನ ಹಾಗೆ ನಿರ್ಭಯವಾಗಿರು, ಮಕ್ಕಳ ಹಾಗೆ ಮನತುಂಬಿ ಪ್ರೀತಿಸು.ಮಲಗುವಾಗ ಇದೇ ಕೊನೆಯ ನಿದ್ರೆ ಎಂಬಂತೆ ಮಲಗು. ಎದ್ದಾಗ ಹಳೆಯ ಚಪ್ಪಲಿ ಎಸೆದುಬಿಡುವ ಹಾಗೆ ತಟ್ಟನೆ ಹಾಸಿಗೆ ಬಿಟ್ಟೇಳು.
ಧರ್ಮದ ಅಧ್ಯಯನ- ಝೆನ್ ಕವನ ಗುರುಗಳಾದವರು ದಿನವೂ ಧರ್ಮ ಪರೀಕ್ಷೆಯಲ್ಲಿ ತೊಡಗುವವರು ಜಟಿಲ ಸೂತ್ರಗಳನ್ನು ದಣಿವಿಲ್ಲದೆ ಪಠಿಸುವರು ಇವನ್ನೆಲ್ಲ ಮಾಡುವ ಮೊದಲು ಗಾಳಿ, ಮಳೆ, ಹಿಮ, ಚಂದಿರ ಕಳಿಸುವ ಪ್ರೇಮ ಪತ್ರ ಓದಲು ಕಲಿತರೆಷ್ಟು ಒಳ್ಳೆಯದು. ಹೀಗೆಂದವನು ೧೩೯೪ರಿಂದ ೧೪೯೧ರ ವರೆಗೆ ಬದುಕಿದ್ದ ಇಕ್ಕ್ಯು ಎಂಬ ಕವಿ.
ಕುರುಡನ ದೃಷ್ಟಿ- ಝೆನ್ ಕತೆ ಗುರು ಬೆನ್ಕಿ ತೀರಿಹೋಗಿದ್ದ. ಅವನಿದ್ದ ದೇವಾಲಯದ ಬಳಿಯ ಕುರುಡನೊಬ್ಬ ಗೆಳೆಯನ ಬಳಿ ಹೀಗೆ ಹೇಳಿದ:"ನಾನು ಕುರುಡ. ಮನುಷ್ಯರ ಮುಖ ನನಗೆ ಕಾಣುವುದಿಲ್ಲ. ಮನುಷ್ಯ ಎಂಥವನು ಎಂದು ಮಾತಿನ ದನಿ ಕೇಳಿಯೇ ನಾನು ತಿಳಿಯಬೇಕು. ಸಾಮಾನ್ಯವಾಗಿ ಹೀಗಾಗುತ್ತದೆ. ಯಾರಾದರೂ ಮತ್ತೊಬ್ಬರ ಸಂತೋಷ ಅಥವ ಯಶಸ್ಸನ್ನು ಅಭಿನಂದಿಸುತ್ತಿದ್ದರೆ ಅವರ ದನಿಯಲ್ಲಿ ಗುಟ್ಟಾದ ಅಸೂಯೆ ನನಗೆ ಕೇಳಿಸುತ್ತದೆ. ಏನೋ ಅನಾಹುತವೋ ಆಘಾತವೋ ಆದಾಗ ಇನ್ನೊಬ್ಬರಿಗೆ ಸಮಾಧಾನ ಹೇಳುವವರ ದನಿಯಲ್ಲಿ 'ನನಗೆ ಹೀಗಾಗಲಿಲ್ಲವಲ್ಲ' ಎಂ ಸಂತೋಷ, 'ಇವನಿಗೆ ಗೆಲುವು ಸಿಗಲಿಲ್ಲ, ನನಗೆ ಸಿಕ್ಕರೂ ಸಿಗಬಹುದು' ಎಂಬ ಗುಪ್ತ ಆಸೆ ನನಗೆ ಕೇಳಿಸುತ್ತದೆ."ಇಷ್ಟು ವರ್ಷಗಳಲ್ಲಿ ಬೆನ್ಕಿಯೊಬ್ಬ ಮಾತ್ರ ಬೇರೆ ಥರ ಇದ್ದದ್ದು ತಿಳಿಯಿತು. ಅವನು ಪೂರ ಪ್ರಾಮಾಣಿಕ. ಅವನು ಸಂತೋಷ ಎಂದಾಗ ಅವನ ದನಿಯಲ್ಲಿ ಸಂತೋಷವಲ್ಲದೆ ಬೇರೆ ಏನೂ ಇರುತ್ತಿರಲಿಲ್ಲ. ಅವನು ಅಯ್ಯೋ ಪಾಪ ಎಂದಾಗ ಅವನ ದನಿಯಲ್ಲಿ ದುಃಖವಲ್ಲದೆ ಬೇರೆ ಏನೂ ಇರುತ್ತಿರಲಿಲ್ಲ. ಪೂರ ಪೂರ ಪ್ರಾಮಾಣಿಕ ಅವನು."[ಪ್ರಾಮಾಣಿಕತೆ ಕೇವಲ ದುಡ್ಡು ಕಾಸಿಗೆ ಮಾತ್ರ ಸಂಬಂಧಿಸಿದ್ದಲ್ಲ. ಭಾವಪ್ರಾಮಾಣಿಕತೆಯೇ ಮುಖ್ಯ. ಮಾತು ಮನಸ್ಸಿಗೆ ತೆರೆಯಾಗದೆ ಮನಸ್ಸನ್ನು ಅದು ಇರುವಹಾಗೆಯೇ ತೆರೆಯಬೇಕು ಅನ್ನುವುದು ಝೆನ್]
ಝೆನ್ ಕಥೆ - ಸಾಕ್ಷಾತ್ಕಾರ. ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಬೀದಿ ಬೀದಿಗಳಲ್ಲಿ ಅವನ “ಶಿಶುವಿಹಾರ”ಗಳಿದ್ದವು.ಝೆನ್ ಪಂಥದ ಅನುಯಾಯಿಗಳು ಯಾರಾದರೂ ಕಂಡರೆ ಕೈ ಚಾಚಿ “ಒಂದು ಕಾಸು ಕೊಡಿ” ಎಂದು ಎಗ್ಗಿಲ್ಲದೆ ಕೇಳುತ್ತಿದ್ದ. “ದೇವಸ್ಥಾನಕ್ಕೆ ಬಂದು ಮಕ್ಕಳಿಗೆ ಪಾಠ ಹೇಳು” ಎಂದು ಯಾರಾದರೂ ಅಂದರೆ, ಮತ್ತಿನ್ನೊಮ್ಮೆ ಕೈ ಚಾಚಿ “ಕಾಸು ಕೊಡಿ” ಅನ್ನುತ್ತಿದ್ದ.ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. “ಝೆನ್‌ನ ಮಹತ್ವವೇನು?” ಎಂದು ಹೋಟಿಯನ್ನು ಕೇಳಿದ.ಹೋಟಿ ತಟ್ಟನೆ ತನ್ನ ಹೆಗಲಮೇಲಿದ್ದ ಗಂಟನ್ನು ಕೆಳಕ್ಕಿಳಿಸಿ ಮೌನವಾ...
ಮುಖವ ನೋಡಿ , ಮೊಲೆಯ ನೋಡಿ ಮುದ್ದ ನೋಡಿ , ಮುಖವ ನೋಡಿ , ಮೊಲೆಯ ನೋಡಿ , ಮುಡಿಯ ನೋಡಿ , ಕರಗಿ ಕೊರಗುವದೆನ್ನ ಮನ. ಇದು ಬಸವಣ್ಣನವರ ಒಂದು ವಚನ। ಏನು ಪ್ರಾಮಾಣಿಕತೆ , ಅಬ್ಬಾ !
ಕೊಟ್ಟ ಕುದುರೆಯನೇರಲರಿಯದೆ-ಅಲ್ಲಮನ ವಚನ ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಅದರಂತೆ ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? ।ತಿರುಕಹಾರುವನಾಗಿ ಮೀಸೆ ತಿರುಚುವೆಯ? (ಡಿವಿಜಿ)
ಇದಕ್ಕಾ ದೇವರ ಹಂಗೇಕೆ ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ (ಲದ್ದೆಯ ಸೋಮ ಎಂಬಾತ ಬೀದರ್ ಜಿಲ್ಲೆಯವನು. ೧೨ನೆಯ ಶತಮಾನದವನು. ಲದ್ದೆ ಎಂದರೆ ಹುಲ್ಲಿನ ಹೊರೆ. ಹುಲ್ಲಿನ ಹೊರೆಯನ್ನು ಕಟ್ಟಿ, ಮಾರಿ, ಬಂದದ್ದರಲ್ಲಿ ಬದುಕಿದ್ದ ವ್ಯಕ್ತಿ ಈತ.)
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ .... ಈ ಬ್ಲಾಗಿನಲ್ಲಿ ಕಲ್ಲುಸಕ್ಕರೆಯಂಥ ವಿಷಯಗಳನ್ನು ಸವಿಗನ್ನಡದಲ್ಲಿ ಬರೆಯುವ ಆಸೆ.